ಬುಧವಾರ, ಜೂನ್ 10, 2015

ಶಬರಿ


ಕಾದಿರುವಳು ಶಬರಿ,
ರಾಮ ಬರುವನೆಂದು,
ತನ್ನ ಪೂಜೆಗೊಳುವನೆಂದು

ವನವನವ ಸುತ್ತಿ ಸುಳಿದು
ತರುತರುವನಲೆದು ತಿರಿದು
ಬಿರಿವೂಗಳಾಯ್ದು ತಂದು
ತನಿವಣ್ಗಳಾಯ್ದು ತಂದು;

ಕೊಳದಲ್ಲಿ ಮುಳುಗಿ ಮಿಂದು
ಬಿಳಿ ನಾರು ಮುಡಿಯನುಟ್ಟು
ತಲೆವಾಗಿಲಿಂಗೆ ಬಂದು
ಹೊಸತಿಲಲಿ ಕಾದು ನಿಂದು.

ಎಳೆಗಾಳಿ ತೀಡುತಿರಲು
ಕಿವಿಯೆತ್ತಿ ಆಲಿಸುವಳು
ಎಲೆಯಲುಗೆ ಗಾಳಿಯಲ್ಲಿ
ನಡೆ ಸಪ್ಪುಳೆಂದು ಬಗೆದು.

ದೂರಕ್ಕೆ ನೋಳ್ಪೆನೆಂದು
ಮರವೇರಿ ದಿಟ್ಟಿಸುವಳು
ಗಿರಿ ಮೇಲಕೈದಿ ಕೈಯ
ಮರೆ ಮಾಡಿ ನೋಡುತಿಹಳು

ಬಾ ರಾಮ, ರಾಮ ಎಂದು
ಬರುತಿಹನು ಇಹನು ಎಂದು
ಹಗಲಿರುಳು ತವಕಿಸಿಹಳು
ಕಳೆದಿಹವು ವರುಷ ಹಲವು.


ಶಬರಿವೊಲು ಜನವು, ದಿನವೂ
ಯುಗಯುಗವು ಕರೆಯುತಿಹುದು
ಕರೆ ಇಳೆಗಳೇಳಲರಸಿ
ತವಕದಲಿ ತಪಿಸುತಿಹುದು.

ಭರವಸೆಗಳಳಿಯವಾಗಿ
ಮನವೆಲ್ಲ ಬಯಕೆಯಾಗಿ
ಹಗಲೆಲ್ಲ ಕಾದು ಕೂಗಿ
ಇರುಳೆಲ್ಲ ಜಾಗರಾಗಿ;

ಬಂದಾನೊ ಬಾರನೋ ಓ
ಕಂಡಾನೊ ಕಾಣನೋ ಓ
ಎಂದೆಂದು ಜಪಿಸಿ ತಪಿಸಿ
ಶಂಕಾತುರಂಗಳೂರಿ.

ಬಾ ರಾಮ, ಬಾರ, ಬಾರಾ
ಬಡವರನು ಕಾಯು ಬಾರಾ
ಕಂಗಾಣದಿವರ ಪ್ರೇಮ
ನುಡಿಸೋತ ಮೂಕ ಪ್ರೇಮ.

-ಕಾದಿರುವುದು ಜನವು
ರಾಮ ಬರುವನೆಂದು
ತಮ್ಮ ಪೂಜೆಗೊಳುವನೆಂದು

ಕವಿ :- ವಿ. ಸೀತಾರಾಮಯ್ಯ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ